ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬೆಂಗಾವಲು ಪಡೆಯಲ್ಲಿರುವ ವಾಹನಗಳ ಸಂಖ್ಯೆಯನ್ನು ಶೇಕಡಾ 50 ರಷ್ಟು ಕಡಿಮೆ ಮಾಡಲು ಸೂಚಿಸಿದ್ದಾರೆ. ಪ್ರಸ್ತುತ ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಇದು ಆಡಳಿತಾತ್ಮಕ ಮಿತವ್ಯಯವನ್ನು ಉತ್ತೇಜಿಸುವುದು ಹಾಗೂ ಇಂಧನ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಅಲ್ಲದೆ, ತಾವು ನುಡಿದಂತೆ ದೇಶದ ನಾಗರಿಕರ ಮುಂದೆ ನಡೆದುಕೊಳ್ಳುವುದು ಪ್ರಧಾನಿ ಮೋದಿಯವರ ಉದ್ದೇಶವಾಗಿದೆ.
ತಮ್ಮ ಭದ್ರತೆಯ ಜವಾಬ್ದಾರಿ ಹೊತ್ತಿರುವ ವಿಶೇಷ ರಕ್ಷಣಾ ಪಡೆಗೆ (SPG) ಸೂಚನೆ ನೀಡಿರುವ ಪ್ರಧಾನಿ, ಬೆಂಗಾವಲು ಪಡೆಯಲ್ಲಿ ವಿದ್ಯುತ್ ಚಾಲಿತ ವಾಹನಗಳ (EV) ಸಂಖ್ಯೆಯನ್ನು ಹೆಚ್ಚಿಸುವಂತೆ ತಿಳಿಸಿದ್ದಾರೆ. ಆದರೆ, ಇದಕ್ಕಾಗಿ ಹೊಸ ವಾಹನಗಳನ್ನು ಖರೀದಿಸಬಾರದು ಎಂಬ ಷರತ್ತನ್ನೂ ಅವರು ವಿಧಿಸಿದ್ದಾರೆ. ‘ಬ್ಲೂ ಬುಕ್’ನಲ್ಲಿ ಉಲ್ಲೇಖಿಸಲಾದ ಕಡ್ಡಾಯ ಭದ್ರತಾ ಮಾರ್ಗಸೂಚಿಗಳಿಗೆ ಯಾವುದೇ ಧಕ್ಕೆ ಬಾರದಂತೆ ಎಸ್ಪಿಜಿ ಈಗಾಗಲೇ ಈ ಬದಲಾವಣೆಗಳನ್ನು ಜಾರಿಗೆ ತರಲು ಆರಂಭಿಸಿದೆ.
ಕೇಂದ್ರ ಸರ್ಕಾರದ ಕಾರ್ಯಯೋಜನೆಯಲ್ಲಿ ದೇಶದ ನಾಗರಿಕರು ಎಲೆಕ್ಟ್ರಿಕ್ ವಾಹನಗಳ ಹೆಚ್ಚುವರಿ ಬಳಕೆ, ಇಂಧನ ಬಳಕೆ ಕಡಿತ ಹಾಗೂ ಅನಗತ್ಯ ಪ್ರಯಾಣ ಕಡಿಮೆ ಮಾಡಲು ಆನ್ಲೈನ್ ಮೂಲಕ ವರ್ಚುವಲ್ ಸಭೆಗಳನ್ನು ಹೆಚ್ಚೆಚ್ಚು ನಡೆಸುವಂತೆ ಸೂಚಿಸಲಾಗಿದೆ. ಪಶ್ಚಿಮ ಏಷ್ಯಾದ ಅಸ್ಥಿರತೆಯಿಂದ ಉಂಟಾದ ಜಾಗತಿಕ ಆರ್ಥಿಕ ಒತ್ತಡಗಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ಪ್ರಧಾನಿಯವರ ಈ ನಡೆಯನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳೂ ಅನುಸರಿಸುತ್ತಿವೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ ಯಾದವ್ ಅವರು ತಮ್ಮ ಅಧಿಕೃತ ಬೆಂಗಾವಲು ಪಡೆಯಲ್ಲಿನ ವಾಹನಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ನಿರ್ಧರಿಸಿದ್ದಾರೆ. ಅನಗತ್ಯ ಪ್ರಯಾಣ ಮತ್ತು ರಾಷ್ಟ್ರೀಯ ಸಂಪನ್ಮೂಲಗಳ ಪೋಲಾಗುವುದನ್ನು ತಡೆಯಲು ಈ ಕ್ರಮಗಳು ಪೂರಕವಾಗಿವೆ.
ಇರಾನ್-ಅಮೆರಿಕ ಯುದ್ಧದ ಹಿನ್ನೆಲೆಯಲ್ಲಿ ದೇಶಕ್ಕೆ ಕರೆ
ಅಮೆರಿಕ-ಇರಾನ್ ನಡುವಿನ ಯುದ್ಧದಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಮೋದಿ, ಜಾಗತಿಕ ಆರ್ಥಿಕ ಏರಿಳಿತ ಮತ್ತು ಹಣದುಬ್ಬರವನ್ನು ಎದುರಿಸಲು ದೇಶವಾಸಿಗಳ ಸಾಮೂಹಿಕ ಸಹಭಾಗಿತ್ವದ ಅಗತ್ಯವಿದೆ ಎಂದು ತಿಳಿಸಿದ್ದರು.
ನಾಗರಿಕರು “ರಾಷ್ಟ್ರೀಯ ಜವಾಬ್ದಾರಿಯುತ” ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಸ್ಥಳೀಯ ಉತ್ಪನ್ನಗಳಿಗೆ (Local Products) ಆದ್ಯತೆ ನೀಡಬೇಕು.ವಿದೇಶಿ ವಿನಿಮಯದ ಮೇಲಿನ ಒತ್ತಡವನ್ನು ತಗ್ಗಿಸಲು ಮುಂದಿನ ಒಂದು ವರ್ಷದವರೆಗೆ ಅನಗತ್ಯವಾಗಿ ಚಿನ್ನ ಖರೀದಿಸುವುದನ್ನು ತಡೆಯಿರಿ. ವಿದೇಶಿ ಪ್ರವಾಸಗಳು ಮತ್ತು ವಿದೇಶಗಳಲ್ಲಿ ನಡೆಯುವ ಐಷಾರಾಮಿ ಮದುವೆ ಸಮಾರಂಭಗಳನ್ನು (Destination Weddings) ತಪ್ಪಿಸಿ. ವಿದೇಶಿ ವಿನಿಮಯ ಮೀಸಲು ಉಳಿಸುವುದು ಕೂಡ ದೇಶಭಕ್ತಿಯ ಒಂದು ರೂಪವಾಗಿದೆ ಎಂದು ಹೇಳಿದ್ದರು.
ವಿದೇಶಕ್ಕೆ ಹೋಗುವ ಬದಲು ದೇಶದೊಳಗಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮತ್ತು ದೇಶದೊಳಗೆ ಸಂಭ್ರಮಾಚರಣೆಗಳನ್ನು ಆಯೋಜಿಸಿ ಎಂದು ಅವರು ಕರೆ ನೀಡಿದ್ದಾರೆ.
ಈ ಮಿತವ್ಯಯದ ಅಭಿಯಾನವು ದೇಶದ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
