Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ತೃಣಮೂಲ ಭದ್ರಕೋಟೆಯಲ್ಲೇ ಮಮತಾ ಸೋಲಿಸಿದ ಸುವೇಂದು ; ಭವಾನಿಪುರದಲ್ಲಿ ʼದೀದಿʼಯನ್ನು ಬಿಜೆಪಿ ‘ಚಕ್ರವ್ಯೂಹ’ದಲ್ಲಿ ಕೆಡವಿದ್ದು ಹೇಗೆ ?

ಕೋಲ್ಕತ್ತಾ: ಸರಿಯಾಗಿ ಐದು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಸೋಲಿನ ಕಹಿ ಉಣಿಸಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಈಗ 2026ರಲ್ಲಿ ಅದನ್ನು ಮರುಕಳಿಸಿದ್ದಾರೆ. ಈ ಬಾರಿ ನಂದಿಗ್ರಾಮದಲ್ಲಲ್ಲ, ಬದಲಿಗೆ ಮಮತಾ ಅವರ ಭದ್ರಕೋಟೆಯಾದ ಕೋಲ್ಕತ್ತಾದ ಭವಾನಿಪುರ ಕ್ಷೇತ್ರದಲ್ಲಿ ಸುವೇಂದು ಗೆಲುವಿನ ನಗೆ ಬೀರಿದ್ದಾರೆ.

2021ರಲ್ಲಿ ನಂದಿಗ್ರಾಮದ ಸೋಲಿನ ನಂತರ ಮುಖ್ಯಮಂತ್ರಿಯಾಗಿ ಮುಂದುವರಿಯಲು ಮಮತಾ ಅವರಿಗೆ ಇದೇ ಭವಾನಿಪುರ ಕ್ಷೇತ್ರ ಕೈ ಹಿಡಿದಿತ್ತು, ಆದರೆ ಈಗ ಅದೇ ಕ್ಷೇತ್ರ ಅವರನ್ನು ಕೈಬಿಟ್ಟಿದೆ ಆದರೆ ಯಾವುದೇ ಸುರಕ್ಷಿತ ಕ್ಷೇತ್ರವೂ ಶಾಶ್ವತವಲ್ಲ ಎಂಬುದು ಈ ಬಾರಿ ಸಾಬೀತಾಗಿದೆ. ಮಮತಾ ಬ್ಯಾನರ್ಜಿ ಅವರಿಗಾಗಿ ಆಪ್ತ ಶೋಭಂದೇವ ಚಟ್ಟೋಪಾಧ್ಯಾಯ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದರೂ, ಮತದಾರರು ಮಾತ್ರ ಈ ‘ಹೊಂದಾಣಿಕೆ ರಾಜಕಾರಣ’ಕ್ಕಿಂತ ಬದಲಾವಣೆಯತ್ತ ಒಲವು ತೋರಿದರು. ಸರ್ಕಾರದ ಮೇಲಿನ ತೀವ್ರ ಅಸಮಾಧಾನವು ‘ಸೇಫ್ ಸೀಟ್’ ಎಂಬ ಭ್ರಮೆಯನ್ನು ಪುಡಿಮಾಡಿದೆ.

ಬಿಜೆಪಿ ವರಿಷ್ಠರ ಸಲಹೆಯಂತೆ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುವೇಂದು ಅಧಿಕಾರಿ, ತಮ್ಮ ಮಾಜಿ ಬಾಸ್ ಮಮತಾ ಬ್ಯಾನರ್ಜಿ ಅವರನ್ನು ಬೆನ್ನಟ್ಟಿ ಅವರದ್ದೇ ಕೋಟೆಯಲ್ಲಿ ಸೋಲಿಸಿದ್ದಾರೆ. 293 ಸ್ಥಾನಗಳ ಪೈಕಿ ಬಿಜೆಪಿ 206 ಸ್ಥಾನಗಳನ್ನು ಗೆದ್ದುಕೊಂಡು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನ್ನು ಧೂಳೀಪಟ ಮಾಡಿದ ದಿನದಂದೇ ಮಮತಾ ಅವರ ಈ ವೈಯಕ್ತಿಕ ಸೋಲು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಕಾಳೀಘಾಟ್‌ನಲ್ಲಿ ನೆಲೆಸಿರುವ ಮಮತಾ ಅವರಿಗೆ ಇದು ಕೇವಲ ಕ್ಷೇತ್ರವಲ್ಲ, ಅವರು ಬೆಂಕಿಯುಗುಳುವ ಯುವ ಕಾಂಗ್ರೆಸ್ ನಾಯಕಿಯಾಗಿ ಬೆಳೆದ ರಾಜಕೀಯ ಕರ್ಮಭೂಮಿ. ಈ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ಭವಾನಿಪುರ ಮತ್ತು ನಂದಿಗ್ರಾಮ ಎರಡೂ ಕ್ಷೇತ್ರಗಳಲ್ಲಿ ವಿಜಯಶಾಲಿಯಾಗಿದ್ದಾರೆ.

ತಮ್ಮ ವಿಜಯದ ಪ್ರಮಾಣಪತ್ರವನ್ನು ಪ್ರದರ್ಶಿಸಿದ ಸುವೇಂದು ಅಧಿಕಾರಿ, “ಮಮತಾ ಬ್ಯಾನರ್ಜಿ ಅವರನ್ನು ಸೋಲಿಸುವುದು ಬಹಳ ಮುಖ್ಯವಾಗಿತ್ತು. ಇದು ಅವರ ರಾಜಕೀಯ ಸನ್ಯಾಸ,” ಎಂದು ಗುಡುಗಿದ್ದಾರೆ. “ಅವರಿಗೆ ಮುಸ್ಲಿಂ ಮತಗಳೆಲ್ಲವೂ ಲಭಿಸಿವೆ. ಆದರೆ ನನಗೆ ಎಲ್ಲಾ ಸಮುದಾಯಗಳಿಂದ, ಅಷ್ಟೇ ಏಕೆ ಸಿಪಿಎಂನ ಹಿಂದೂ ಮತದಾರರಿಂದಲೂ ಮತಗಳು ಬಂದಿವೆ,” ಎಂದು ಅವರು ಹೇಳಿದ್ದಾರೆ. ತಮ್ಮ ಪ್ರಚಾರ ಕಾರ್ಯದಲ್ಲಿ ಗುಜರಾತ್ ಮತ್ತು ರಾಜಸ್ಥಾನದ ಶಾಸಕರು ಮತ್ತು ನಾಯಕರು ಸಹಾಯ ಮಾಡಿದ್ದಾರೆ ಎಂದು ಅವರು ಸ್ಮರಿಸಿದ್ದಾರೆ.

‘ಮಿನಿ ಇಂಡಿಯಾ’ದಲ್ಲಿ ನಡೆದ ರೋಚಕ ಹಣಾಹಣಿ

ಸೋಮವಾರ ನಡೆದ ಮತ ಎಣಿಕೆಯಲ್ಲಿ ಭವಾನಿಪುರ ಕಣವು ಹಲವು ಏರಿಳಿತಗಳಿಗೆ ಸಾಕ್ಷಿಯಾಯಿತು. ಬೆಳಗ್ಗೆ ಅಂಚೆ ಮತಗಳ ಎಣಿಕೆಯಲ್ಲಿಯೇ ಸುವೇಂದು ಮುನ್ನಡೆ ಸಾಧಿಸಿದ್ದರು. ಆದರೆ ಏಳನೇ ಸುತ್ತಿನ ವೇಳೆಗೆ ಮಮತಾ ಮುನ್ನಡೆ ಸಾಧಿಸಿದರು. ಒಂದು ಹಂತದಲ್ಲಿ ಮಮತಾ 19,000 ಮತಗಳಷ್ಟು ಭಾರಿ ಅಂತರ ಕಾಯ್ದುಕೊಂಡಾಗ ಜಯ ಅವರಿಗೆ ಸುಲಭ ಎಂದು ಭಾವಿಸಲಾಗಿತ್ತು. ಆದರೆ ಸಂಜೆ 6:30ರ ವೇಳೆಗೆ ಈ ಮುನ್ನಡೆ 2,900ಕ್ಕೆ ಕುಸಿಯಿತು. ರಾತ್ರಿ 9 ಗಂಟೆಯ ವೇಳೆಗೆ 20 ಸುತ್ತುಗಳ 17ನೇ ಸುತ್ತಿನಲ್ಲಿ ಸುವೇಂದು 556 ಮತಗಳ ಮುನ್ನಡೆ ಸಾಧಿಸಿದಾಗ ಮಮತಾ ಅವರಿಗೆ ಮತ್ತೆ ಟೆನ್ಶನ್‌. 18 ಸುತ್ತುಗಳು ಮುಗಿದಾಗ ಸುವೇಂದು 11,000 ಮತಗಳ ಮುನ್ನಡೆ ಪಡೆದಿದ್ದರು. ಅಂತಿಮವಾಗಿ ಸುವೇಂದು ಅಧಿಕಾರಿ 15,000 ಮತಗಳ ಅಂತರದಿಂದ ಮಮತಾ ಬ್ಯಾನರ್ಜಿ ಅವರನ್ನು ಪರಾಭವಗೊಳಿಸಿದರು.

ಮಮತಾ ಸೋಲಿಗೆ ಕಾರಣವಾದ ಅಂಶಗಳು

ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಮಹಿಳಾ ಸುರಕ್ಷತೆಯ ವಿಷಯದಲ್ಲಿ ಮಮತಾ ಅವರ ಇಮೇಜ್‌ಗೆ ಭಾರಿ ಧಕ್ಕೆ ತಂದಿತ್ತು. ಅಲ್ಲದೆ, ಈ ಬಾರಿ ಬಿಜೆಪಿಯು ಮಮತಾ ವಿರುದ್ಧ ವೈಯಕ್ತಿಕ ನಿಂದನೆಗೆ ಇಳಿಯದೆ, ಜನರ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸಿತು. ತೃಣಮೂಲದ ಕೆಳಹಂತದ ಕಾರ್ಯಕರ್ತರ “ದಬಾಳಿಕೆ ಸಂಸ್ಕೃತಿ” (Threat Culture) ಮತ್ತು ಭ್ರಷ್ಟಾಚಾರದಿಂದ ಬೇಸತ್ತಿದ್ದ ಜನರಿಗೆ ಬಿಜೆಪಿ ನೀಡಿದ ‘ವಿಕಸಿತ ಬಂಗಾಳ’ದ ಆಶ್ವಾಸನೆಗಳು ಹೆಚ್ಚು ಪರಿಣಾಮ ಬೀರಿದವು. ಇದರ ಜೊತೆ ಹಲವು ಪ್ರಮುಖ ಅಂಶಗಳು ಮಮತಾ ಸೋಲಿಗೆ ಕಾರಣವಾಗಿವೆ.

ಜನಸಂಖ್ಯಾ ಲ್ಯಾಂಡ್‌ಸ್ಕೇಪ್‌ನಲ್ಲಿ ಬದಲಾವಣೆ

ಭವಾನಿಪುರವನ್ನು ‘ಮಿನಿ ಇಂಡಿಯಾ’ ಎನ್ನಲಾಗುತ್ತದೆ. ಇಲ್ಲಿ 42% ಬಂಗಾಳಿ ಹಿಂದೂಗಳು, 34% ಬಂಗಾಳೇತರ ಹಿಂದೂಗಳು (ಗುಜರಾತಿಗಳು, ಮಾರ್ವಾಡಿಗಳು), ಸುಮಾರು 24% ಮುಸ್ಲಿಮರು ಮತ್ತು ಬಿಹಾರ, ಒಡಿಶಾ, ಜಾರ್ಖಂಡ್‌ನ ವಲಸಿಗರಿದ್ದಾರೆ. ಈ ಬಾರಿ ಕೇವಲ ಗುಜರಾತಿ-ಮಾರ್ವಾಡಿಗಳಷ್ಟೇ ಅಲ್ಲದೆ, ಬಂಗಾಳಿ ಹಿಂದೂ ಮತದಾರರು ಕೂಡ ದೊಡ್ಡ ಮಟ್ಟದಲ್ಲಿ ಬಿಜೆಪಿ ಕಡೆಗೆ ವಾಲಿರುವುದು ಕಂಡುಬಂದಿದೆ.

 ಟಿಎಂಸಿ ಆಡಳಿತದ ಬಗ್ಗೆ ಸುಶಿಕ್ಷಿತ ಮಧ್ಯಮ ವರ್ಗದ ಜನರಲ್ಲಿ ಬೇಸರವಿತ್ತು. ಮಮತಾ ಅವರನ್ನು ‘ಮನೆಯ ಮಗಳು’ (ಘೋರೆರ್ ಮೇಯೆ) ಎಂದು ಕರೆಯುತ್ತಿದ್ದ ಹಳೆಯ ನೆರೆಹೊರೆಯ ಸಂಬಂಧಗಳು ಈಗಿನ ಅಪಾರ್ಟ್‌ಮೆಂಟ್ ಸಂಸ್ಕೃತಿಯಲ್ಲಿ ಮರೆಯಾಗಿವೆ.

ಅಂಕಿಅಂಶಗಳ ಪ್ರಕಾರ, 2021ರಲ್ಲಿ ಶೇ. 72ರಷ್ಟಿದ್ದ ಮಮತಾ ಅವರ ಮತ ಹಂಚಿಕೆ 2026ರ ವೇಳೆಗೆ ಶೇ. 42ಕ್ಕೆ ಕುಸಿದಿದೆ. ಮಮತಾ ರಾಜ್ಯಾದ್ಯಂತ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾಗ, ಬಿಜೆಪಿ ಭವಾನಿಪುರದ ಗಲ್ಲಿ ಗಲ್ಲಿಗಳಲ್ಲಿ ಹಿಡಿತ ಸಾಧಿಸಿತ್ತು. ಇಲ್ಲಿನ 8 ವಾರ್ಡ್‌ಗಳ ಪೈಕಿ 5ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವುದು ಟಿಎಂಸಿಯ ಸಾಂಸ್ಥಿಕ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಯಿತು. ಇದರಿಂದಾಗಿ ಅಕ್ರಮ ಮತ್ತು ನಕಲಿ ಮತಗಳಿಗೆ ಕಡಿವಾಣ ಬಿದ್ದಿತು. ಭವಾನಿಪುರದಿಂದ ಸುಮಾರು 47,000 ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿತ್ತು ಎನ್ನಲಾಗಿದೆ. ಇದರಲ್ಲಿ ಹೆಚ್ಚಿನವರು ಮುಸ್ಲಿಂ ಮತದಾರರು ಎಂದು ಟಿಎಂಸಿ ಆರೋಪಿಸಿದೆ. ಈ ಅಂತರವು ಸುವೇಂದು ಅವರ ಗೆಲುವಿನ ಅಂತರಕ್ಕಿಂತ ಹೆಚ್ಚಿದೆ.

ಅಲ್ಲದೆ, ಆಡಳಿತ ವಿರೋಧಿ ಅಲೆಯು ಪ್ರಬಲವಾಗಿತ್ತು. ಕಳೆದ 15 ವರ್ಷಗಳ ಟಿಎಂಸಿ ಆಡಳಿತದ ವಿರುದ್ಧ ಭ್ರಷ್ಟಾಚಾರ, ‘ಕಟ್-ಮನಿ’ ಸಂಸ್ಕೃತಿ ಮತ್ತು ಸಿಂಡಿಕೇಟ್ ವ್ಯವಸ್ಥೆಯ ಬಗ್ಗೆ ವ್ಯಾಪಕ ಅಸಮಾಧಾನವಿತ್ತು.

ಬಿಜೆಪಿಯ ಚಾಣಾಕ್ಷ ತಂತ್ರ ಮತ್ತು ಮಮತಾ ಅವರ ಭೀತಿ

ಬಿಜೆಪಿ ಈ ಕ್ಷೇತ್ರವನ್ನು ಮಮತಾ ವಿರುದ್ಧದ ‘ಪ್ರತಿಷ್ಠೆಯ ಕದನ’ವನ್ನಾಗಿ ಪರಿವರ್ತಿಸಿತ್ತು. ಸುವೇಂದು ಅಧಿಕಾರಿಯಂತಹ ಬಲಿಷ್ಠ ನಾಯಕನನ್ನು ಕಣಕ್ಕಿಳಿಸಿ ಮಮತಾ ಅವರನ್ನು ತಮ್ಮದೇ ಕ್ಷೇತ್ರದಲ್ಲಿ ಬಂಧಿಸುವ ‘ಚಕ್ರವ್ಯೂಹ’ ರೂಪಿಸಿತ್ತು. ಅಮಿತ್ ಶಾ ಅವರು ಸ್ವತಃ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು, “ಭವಾನಿಪುರದ ಗೆಲುವು ಬಂಗಾಳದ ಬದಲಾವಣೆಯ ಶಾರ್ಟ್‌ಕಟ್” ಎಂದು ಘೋಷಿಸಿದ್ದರು.

ಮಮತಾ ಬ್ಯಾನರ್ಜಿ ಪ್ರಚಾರದ ಸಮಯದಲ್ಲಿಯೇ ಒಂದು ರೀತಿಯ ಅಭದ್ರತೆಗೆ ಒಳಗಾಗಿದ್ದರು. ಪ್ರಚಾರ ಸಭೆಯೊಂದರಲ್ಲಿ ಹತ್ತಿರದಲ್ಲೇ ಬಿಜೆಪಿ ಮೆರವಣಿಗೆ ನಡೆಯುತ್ತಿದ್ದಾಗ, “ನಿಮಗೆ ಸಾಧ್ಯವಾದರೆ ನನಗೆ ಮತ ನೀಡಿ, ಅವರು ನನಗೆ ಸಭೆ ನಡೆಸಲು ಬಿಡುತ್ತಿಲ್ಲ,” ಎಂದು ಹೇಳಿ ವೇದಿಕೆಯಿಂದ ಇಳಿದು ಹೋಗಿದ್ದರು. ಅಂದು ಅವರು ಪ್ರದರ್ಶಿಸಿದ ಅಸಹಾಯಕತೆ ಅಥವಾ ಅನುಕಂಪ ಗಳಿಸುವ ತಂತ್ರವು, ಅವರು ಸೋಲನ್ನು ಮೊದಲೇ ಅರಿತಿದ್ದಾರೆಯೇ ಎಂಬ ಅನುಮಾನ ಮೂಡಿಸಿತ್ತು.

ಲಕ್ಷ್ಮೀರ್ ಭಂಡಾರ್ ಯೋಜನೆಗೆ ಸೋಲು

ಟಿಎಂಸಿ ಸರ್ಕಾರವು ‘ಲಕ್ಷ್ಮೀರ್ ಭಂಡಾರ್’, ‘ಕನ್ಯಾಶ್ರೀ’ ಅಂತಹ ಜನಪ್ರಿಯ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳಿತ್ತು. ಆದರೆ ಬಂಗಾಳದ ಜನರಿಗೆ ಕೇವಲ ಭತ್ಯೆಗಳು ಸಾಕಾಗಲಿಲ್ಲ. ಉದ್ಯೋಗದ ಕೊರತೆ ಮತ್ತು ಭ್ರಷ್ಟಾಚಾರದ ಮುಂದೆ ಈ ಯೋಜನೆಗಳು ಮಂಕಾದವು. ಸುಶಿಕ್ಷಿತ ಮಹಿಳೆಯರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು.

ಒಟ್ಟಾರೆಯಾಗಿ, ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಅನುಭವಿಸಿದ ಈ ವೈಯಕ್ತಿಕ ಸೋಲು ಪಶ್ಚಿಮ ಬಂಗಾಳದಲ್ಲಿ ಅವರ 15 ವರ್ಷಗಳ ಸುದೀರ್ಘ ಆಡಳಿತದ ಅಂತ್ಯವನ್ನು ಸಾರಿದೆ. ಸುವೇಂದು ಅಧಿಕಾರಿಗೆ ಇದು ತಮ್ಮ ರಾಜಕೀಯ ಜೀವನದ ಅತ್ಯಂತ ಸ್ಮರಣೀಯ ಗೆಲುವಾಗಿ ದಾಖಲಾಗಿದೆ.

ಆರ್‌ಜಿ ಕರ್ ಪ್ರಕರಣದ ಬಿಸಿತುಪ್ಪ

ಕೋಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಂತರ ನಡೆದ ಮೊದಲ ಚುನಾವಣೆ ಇದಾಗಿತ್ತು. ಸಂತ್ರಸ್ತೆಯ ತಾಯಿ ರತ್ನ ದೇಬನಾಥ ಅವರಿಗೆ ಬಿಜೆಪಿಯಿಂದ ಟಿಕೆಟ್‌ ನೀಡಿ ಕಣಕ್ಕಿಳಿಸಿದ್ದು ಟಿಎಂಸಿ ಇಮೇಜ್‌ಗೆ ದೊಡ್ಡ ಪೆಟ್ಟು ನೀಡಿತು. ವೈದ್ಯರ ಮುಷ್ಕರ ಮತ್ತು ಸರ್ಕಾರದ ಮೌನದಿಂದ ಕೆರಳಿದ್ದ ನಗರ ಪ್ರದೇಶದ ಮತದಾರರು, ಮಮತಾ ಸರ್ಕಾರದ ವಿರುದ್ಧ ಮತ ಚಲಾಯಿಸುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಭವಾನಿಪುರದ ಈ ಸೋಲು ಕೇವಲ ಒಂದು ಕ್ಷೇತ್ರದ ಸೋಲಲ್ಲ, ಇದು ಮಮತಾ ಬ್ಯಾನರ್ಜಿ ಅವರ ಸುದೀರ್ಘ ರಾಜಕೀಯ ಪಯಣದ ಅತಿದೊಡ್ಡ ಹಿನ್ನಡೆಯಾಗಿದೆ.

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕರುನಾಡಿಗೆ ಜಲಕಂಟಕ, ಭುವಿಯೇ ತಲ್ಲಣ : ಭವಿಷ್ಯ ನುಡಿದ ಪ್ರಖ್ಯಾತ ಸ್ವಾಮೀಜಿ...!ಬಾಟಲಿ, ಕ್ಯಾನ್‌ಗಳಲ್ಲಿ ಪೆಟ್ರೋಲ್-ಡೀಸೆಲ್ ಮಾರಾಟ ನಿಷೇಧ...!ಕೊನೆಗೂ ಸಿಹಿಸುದ್ದಿ : ಶೀಘ್ರದಲ್ಲೇ ಮಾರ್ಚ್, ಏಪ್ರಿಲ್ ಗೃಹಲಕ್ಷ್ಮೀ ಹಣ ಜಮಾ:  ಲಕ್ಷ್ಮೀ ಹೆಬ್ಬಾಳಕರ್ ಕೊಟ್ರು ಈ ಗುಡ್ ನ್ಯೂಸ್..!ನೈರುತ್ಯ ರೇಲ್ವೆ ಅಧಿಕಾರಿಗಳೊಂದಿಗೆ ಸಂಸದ ಶೆಟ್ಟರ್ ಸಭೆಬೆಳಗಾವಿ : 12ಕ್ಕೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಸರಕಾರಿ ನೌಕರರಿಗೆ ಸಿಹಿಸುದ್ದಿ : ತುಟ್ಟಿಭತ್ಯೆ ಹೆಚ್ಚಳ ಪ್ರಜಾಪ್ರಭುತ್ವದ ತತ್ವಗಳನ್ನು ರಕ್ಷಿಸುವುದು ನಾಗರಿಕರ ಆದ್ಯ ಕರ್ತವ್ಯ : ಎ.ಎಸ್.ಪಾಶ್ಚಾಪುರೆಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಅನುಮಾನಾಸ್ಪದ ವಸ್ತುಗಳಿದ್ದ ಬ್ಯಾಗ್‌ ಪತ್ತೆತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ ಪ್ರಮಾಣ ವಚನ