ಬೆಳಗಾವಿ : ರಾಜ್ಯದ ನೂತನ ಸರ್ಕಾರದ ರಚನೆಗೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳ ನಡುವೆಯೇ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಸುಕ್ಷೇತ್ರ ಸುಳೇಭಾವಿಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನಡೆಸಿದರು.
ನಿಕಟಪೂರ್ವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕಿ ಲಕ್ಷ್ಮೀ ಆರ್. ಹೆಬ್ಬಾಳಕರ್ ಅವರು ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಹಾಗೂ ಪ್ರಮುಖ ಖಾತೆಗಳ ಸಚಿವರಾಗಿ ಸ್ಥಾನ ಪಡೆಯಲೆಂದು ಶ್ರೀ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಲಕ್ಷ್ಮೀ ಹೆಬ್ಬಾಳಕರ್ ಅವರು ಕಳೆದ ಹಲವು ವರ್ಷಗಳಿಂದ ಜನಸೇವೆ, ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದು, ಅವರ ಅನುಭವ ಮತ್ತು ಆಡಳಿತ ಕೌಶಲ್ಯವನ್ನು ಪರಿಗಣಿಸಿ ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ಜವಾಬ್ದಾರಿ ನೀಡಬೇಕು ಎಂಬುದು ಕಾರ್ಯಕರ್ತರು ಹಾಗೂ ಮುಖಂಡರ ಆಶಯವಾಗಿದೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ವಿಶೇಷ ಪೂಜೆಯ ಬಳಿಕ ದೇವಿಯ ಸನ್ನಿಧಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಮುಖಂಡರು, ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಉನ್ನತ ಹುದ್ದೆ ದೊರೆತು ರಾಜ್ಯದ ಜನತೆಗೆ ಇನ್ನಷ್ಟು ಸೇವೆ ಸಲ್ಲಿಸುವ ಅವಕಾಶ ಸಿಗಲಿ ಎಂದು ಹಾರೈಸಿದರು. ಅಲ್ಲದೆ, ರಾಜ್ಯದ ಹೊಸ ಸರ್ಕಾರ ಜನಪರ ಆಡಳಿತ ನೀಡುವ ಮೂಲಕ ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.
ಗಂಗಣ್ಣ ಕಲ್ಲೂರ, ದೇವಣ್ಣ ಹುಂಕ್ರಿಪಾಟೀಲ, ಲಕ್ಷ್ಮೀನಾರಾಯಣ ಕಲ್ಲೂರ, ದತ್ತಾ ಬಂಡಿಗಣಿ, ಅಡಿವೇಶ್ ಇಟಗಿ, ನಾಗೇಶ್ ದೇಸಾಯಿ, ಬಸವರಾಜ ಮ್ಯಾಗೋಟಿ, ನಾರಾಯಣ ಲೋಕರೆ, ಅಡಿವೆಪ್ಪ ನಾಗರಾಳಿ, ಮಹಾದೇವ ಕೇಸಪ್ಪನಟ್ಟಿ, ತುಳಸಪ್ಪ ಯರಜರ್ವಿ, ಸಂಭಾಜಿ ಯಮೋಜಿ, ಲಕ್ಷ್ಮಣ ಮಂಡು, ರುದ್ರಪ್ಪ ಅಮರಾಪುರ, ಮಹೇಶ್ ಸುಗಣೆನ್ನವರ್, ಸಿದ್ದಬಸವ ಮಂತುರಗಿಮಠ, ನಾಗಯ್ಯ ಕುಡಚಿಮಠ, ಪ್ರೇಮ್ ಕೋಲಕಾರ, ಅಪ್ಸರ್ ಜಮಾದಾರ್ ಸೇರಿದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
