ಬೆಂಗಳೂರು: ತಮ್ಮ ಪತ್ನಿಯ ಆರೋಗ್ಯದಲ್ಲಿ ಏರಪೇರು ಉಂಟಾಗಿರುವ ಕಾರಣ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಬುಧವಾರ ತಡ ರಾತ್ರಿ ದಿಢೀರ್ ಆಗಿ ಇಂದೋರ್ ತೆರಳಿದ್ದಾರೆ. ಅವರ ಮರಳಿ ಬರುವ ಸಮಯ ನಿಗದಿ ಆಗಿಲ್ಲ ಎಂದು ಲೋಕಭವನದ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರು ಲೋಕಭವನಕ್ಕೆ ಬಂದು ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಬಹುದು. ಅದನ್ನು ಲೋಕಭವನದಿಂದ ರಾಜ್ಯಪಾಲರಿಗೆ ಕಳುಹಿಸಲಾಗುವುದು. ಅವರ ಅಲ್ಲಿಂದಲೇ (ಇಂದೋರ್) ಈ ಬಗ್ಗೆ ಮುಂದಿನ ಕ್ರಮವನ್ನು ಸೂಚಿಸಬಹುದು. ಇಂದೋರ್ನಿಂದ ವಾಪಸ್ ಬಂದ ಬಳಿಕ ಸಿದ್ದರಾಮಯ್ಯ ಅವರನ್ನು ಲೋಕಭವನಕ್ಕೆ ಕರೆಸಿಕೊಂಡು ರಾಜ್ಯಪಾಲರು ಮಾತುಕತೆ ನಡೆಸಬಹುದು' ಎಂದೂ ಮೂಲಗಳು ಹೇಳಿವೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಪದತ್ಯಾಗಕ್ಕೆ ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಾಹ್ನ ಲೋಕಭವನಕ್ಕೆ ತೆರಳಿ ರಾಜಪಾಲರಿಗೆ ರಾಜೀನಾಮೆ ಪತ್ರ ನೀಡಲು ನಿರ್ಧರಿಸಿದ್ದಾರೆ. ಖುದ್ದು ಭೇಟಿಗೆ ರಾಜ್ಯಪಾಲರು ಲಭ್ಯ ಇಲ್ಲದೇ ಇರುವುದರಿಂದ ಅವರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸುವ ಸಾಧ್ಯತೆಯಿದೆ.
'ರಾಜ್ಯಪಾಲರ ಪತ್ನಿ ಅನಾರೋಗ್ಯಗೊಂಡಿರುವ ಮಾಹಿತಿ ಬುಧವಾರ ರಾತ್ರಿ ಬಂತು. ತಕ್ಷಣವೆ ರಾಜ್ಯಪಾಲರು ಇಂದೋರ್ಗೆ ತೆರಳಿದ್ದಾರೆ. ಪತ್ನಿಯ ಆರೋಗ್ಯ ಸುಧಾರಿಸಿದ ನಂತರವೇ ಅವರ ವಾಪಸ್ ಆಗಬಹುದು. ಈ ಬಗ್ಗೆ ಖಚಿತ ಮಾಹಿತಿ ಇಲ್ಲ' ಎಂದು ಲೋಕಭವನದ ಮೂಲಗಳು ಹೇಳಿವೆ.