ಹುಣಸಗಿ: 'ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ರಾಜ್ಯ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಸಮುದಾಯ ಹಿತಕ್ಕೆ ಆದ್ಯತೆ ನೀಡಬೇಕು' ಎಂದು ಗಾಣಿಗ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಸುರೇಶ ಸಜ್ಜನ ರಾಜ್ಯ ಸರ್ಕಾವನ್ನು ಒತ್ತಾಯಿಸಿದರು.
ಪಟ್ಟಣದಲ್ಲಿ ತಾಲ್ಲೂಕು ಗಾಣಿಗ ಸಮಾಜದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
'ಸವದಿ ಅವರು ನಮ್ಮ ಸಮುದಾಯದ ನಾಯಕರಾಗಿದ್ದು, ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದು ಮುಖ್ಯ. ಅಲ್ಲದೇ ರಾಜ್ಯದಲ್ಲಿರುವ ಗಾಣಿಗರು ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಗಾಣಿಗ ಅಭಿವೃದ್ಧಿ ನಿಗಮಕ್ಕೆ ₹500 ಕೋಟಿ ಅನುದಾನ ನೀಡುವ ಮೂಲಕ ಸರ್ವತೋಮುಖ ಬೆಳಗಣಿಗೆಗೆ ಸರ್ಕಾರ ಮುಂದಾಗಬೇಕು' ಎಂದರು.
ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ಬೋರಮಗುಂಡ ಮಾತನಾಡಿ, ಸುರೇಶ ಸಜ್ಜನ್ ಅವರು ಸುಮಾರು ನಾಲ್ಕು ದಶಕಗಳಿಂದಲೂ ಸಾಮಾಜಿಕ ಹಾಗೂ ಸಮುದಾಯಿಕ ಬೆಳವಣಿಗೆ ಕಾರ್ಯಕ್ರಮಗಳು ಮಾಡುತ್ತ ಬಂದಿದ್ದಾರೆ. ಮುಂದೆ ಎಲ್ಲರೂ ಒಟ್ಟಾಗಿ ನಮ್ಮ ಸಮುದಾಯ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡೋಣ' ಎಂದು ಹೇಳಿದರು.
ಬಸವರಾಜ ಸಜ್ಜನ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹುಣಸಗಿಯಲ್ಲಿ ಸಮುದಾಯ ಕಾರ್ಯಚಟುವಟಿಕೆಗಳಿಗೆ ಒಂದು ಎಕರೆ ಸ್ಥಳ ನೀಡುವಂತೆ ಸ್ಥಳೀಯ ಶಾಸಕ ಮತ್ತು ಸಚಿವರು ಭೇಟಿ ಮಾಡಲು ನೀಯೋಗ ರೂಪಿಸುವಂತೆ ತೀರ್ಮಾನಿಸಲಾಯಿತು.
ಹುಣಸಗಿ ತಾಲ್ಲೂಕು ಗಾಣಿಗ ಸಮಾಜದಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.