Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ

ಭೋಪಾಲ್:  ಪ್ರೀತಿಗೆ ಮಾತುಗಳ ಅಗತ್ಯವಿಲ್ಲ… ನಿಷ್ಠೆಗೆ ಭಾಷೆಯ ಅಗತ್ಯವಿಲ್ಲ… ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿಗಳೇ ಸಂಬಂಧಗಳ ನಿಜವಾದ ಅರ್ಥವನ್ನು ಬದುಕಿನ ಕೊನೆಯ ಕ್ಷಣದವರೆಗೂ ತೋರಿಸಿಬಿಡುತ್ತವೆ. ಅಂತಹ ಮನಮಿಡಿಯುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. 15 ವರ್ಷಗಳ ಕಾಲ ತನ್ನ ಯಜಮಾನನೇ ತನ್ನ ಪ್ರಪಂಚ ಎಂದು ಬದುಕಿದ ‘ದುಗ್ಗು’ ಎಂಬ ಸಾಕು ನಾಯಿ, ಮೃತಪಟ್ಟ ಯಜಮಾನನ ಅಂತಿಮ ಯಾತ್ರೆಯಲ್ಲೇ ಕುಸಿದು ಪ್ರಾಣ ಬಿಟ್ಟು, ಪ್ರೀತಿ ಎಂದರೆ ಜೊತೆಯಾಗಿ ಬದುಕುವುದು ಮಾತ್ರವಲ್ಲ, ಕೊನೆಯ ಉಸಿರಿನವರೆಗೂ ಜೊತೆಯಾಗಿರುವುದು ಎಂಬುದನ್ನು ಜಗತ್ತಿಗೆ ಮೌನವಾಗಿ ಸಾರಿತು.

15 ವರ್ಷಗಳ ಕಾಲ ದುಗ್ಗು ಎಂಬ ಸಾಕು ನಾಯಿಯ ಬದುಕು ಸಂಪೂರ್ಣವಾಗಿ ಪ್ರದೀಪ್ ಜೈನ್ ಅವರ ಸುತ್ತಲೇ ಸುತ್ತುತ್ತಿತ್ತು. ಯಜಮಾನ ಮನೆಗೆ ಬರುವವರೆಗೆ ಬಾಗಿಲ ಬಳಿ ಕಾದು ನಿಲ್ಲುವುದು, ಅವರು ಊಟ ಮಾಡಿದ ಬಳಿಕವೇ ತಾನೂ ಆಹಾರ ಸೇವಿಸುವುದು, ಮನೆಯೊಳಗೆ ಅವರು ಎಲ್ಲಿ ಹೋದರೂ ನೆರಳಿನಂತೆ ಅವರನ್ನು ಹಿಂಬಾಲಿಸುವುದು, ಅವರ ಆರೋಗ್ಯ ಹದಗೆಟ್ಟರೆ ತಾನೂ ಊಟ ಬಿಟ್ಟು ಮಂಕಾಗುವುದು—ಇದೆಲ್ಲವೂ ದುಗ್ಗುವಿಗೆ ಜೀವನವಾಗಿತ್ತು. ಅದಕ್ಕೆ ಪ್ರದೀಪ್ ಜೈನ್ ಅದರ ಯಜಮಾನ ಮಾತ್ರವಲ್ಲ, ಅದರ ಇಡೀ ಜಗತ್ತಾಗಿದ್ದರು.

ಆದರೆ ಮಂಗಳವಾರ ಎಂದಿನಂತೆ ಬಾಗಿಲ ಬಳಿ ಕಾದಿದ್ದ ದುಗ್ಗುವಿಗೆ, ಈ ಬಾರಿ ಮನೆಗೆ ಮರಳಿದ ತನ್ನ ಯಜಮಾನ ಮತ್ತೆ ಎಂದಿಗೂ ತನ್ನನ್ನು ಕರೆಯುವುದಿಲ್ಲ ಎಂಬ ಕ್ರೂರ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಯಿತು.
ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಸಿವಿಲ್ ಲೈನ್ಸ್ ನಿವಾಸಿಯಾಗಿದ್ದ 67 ವರ್ಷದ ಪ್ರದೀಪ್ ಜೈನ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಭೋಪಾಲ್‌ನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದರು. ಮಂಗಳವಾರ ಸಂಜೆ ಅವರ ಪಾರ್ಥಿವ ಶರೀರವನ್ನು ಮನೆಗೆ ತರಲಾಯಿತು. ಅಂತಿಮ ದರ್ಶನಕ್ಕಾಗಿ ಬಂಧು-ಬಳಗ, ಸ್ನೇಹಿತರು ಹಾಗೂ ಅಕ್ಕಪಕ್ಕದವರು ಸೇರಿದ್ದರು. ಅವರ ನಡುವೆ 15 ವರ್ಷಗಳಿಂದ ಮನೆಯ ಸದಸ್ಯನಾಗಿ ಬೆರೆತಿದ್ದ ದುಗ್ಗು ಕೂಡ ತನ್ನ ಯಜಮಾನನಿಗಾಗಿ ಕಾದು ನಿಂತಿತ್ತು.
ಪಾರ್ಥಿವ ಶರೀರ ಮನೆಗೆ ತಲುಪುತ್ತಿದ್ದಂತೆಯೇ ಏನೋ ಬದಲಾವಣೆಯಾಗಿದೆ ಎಂಬುದನ್ನು ದುಗ್ಗು ಅರಿತುಕೊಂಡಿತು. ಅದು ಜೋರಾಗಿ ಕೂಗತೊಡಗಿತು. ಮತ್ತೆ ಮತ್ತೆ ಮಲಗಿಸಿದ್ದ ಯಜಮಾನನ ದೇಹದತ್ತ ಧಾವಿಸಲು ಯತ್ನಿಸಿತು. ಅದನ್ನು ಸಮಾಧಾನಪಡಿಸಲು ಸಾಧ್ಯವಾಗಲಿಲ್ಲ. ನೋವನ್ನು ತಡೆಯಲಾಗದೆ ಅದು ಇನ್ನಷ್ಟು ತೊಂದರೆಗೊಳಗಾಗಬಹುದು ಎಂಬ ಆತಂಕದಿಂದ ಕುಟುಂಬದವರು ಅದನ್ನು ಬೇರೆ ಕೋಣೆಯಲ್ಲಿ ಇರಿಸಿದರು.

ಆದರೆ ಆ ಇಡೀ ರಾತ್ರಿ ದುಗ್ಗುವಿಗೆ ನಿದ್ರೆ ಮಾಡಲಿಲ್ಲ. ಅದರ ನೋವಿನ ಕೂಗು ಮನೆಯ ಗೋಡೆಗಳನ್ನು ತಟ್ಟುತ್ತಲೇ ಇತ್ತು. ಅದು ಒಂದು ತುತ್ತು ಆಹಾರವನ್ನೂ ಸೇವಿಸಲಿಲ್ಲ. ಮತ್ತೆ ಮತ್ತೆ ಹೊರಬರಲು ಪ್ರಯತ್ನಿಸುತ್ತಾ, ವರ್ಷಗಳಿಂದ ತನ್ನ ಬದುಕಿನ ಆಸರೆಯಾಗಿದ್ದ ವ್ಯಕ್ತಿಯನ್ನು ಒಮ್ಮೆ ನೋಡಬೇಕೆಂಬ ಹಂಬಲದಿಂದ ಪರದಾಡುತ್ತಲೇ ಇತ್ತು. ಆದರೆ ಆ ಧ್ವನಿ, ಆ ಸ್ಪರ್ಶ, ಆ ಕರೆಯು ಮತ್ತೆ ಎಂದಿಗೂ ಕೇಳಿಬರಲಿಲ್ಲ.
ಮಾರನೇ ದಿನ ಅಂತಿಮ ಯಾತ್ರೆ ಆರಂಭಿಸುವ ಮೊದಲು ಕುಟುಂಬದವರು ದುಗ್ಗುವಿಗೆ ತನ್ನ ಪ್ರೀತಿಯ ಯಜಮಾನನನ್ನು ಕೊನೆಯ ಬಾರಿ ನೋಡಲು ಅವಕಾಶ ನೀಡಿದರು. ಅದು ನಿಧಾನವಾಗಿ ನಡೆದು ಬಂದು ಪ್ರದೀಪ್ ಜೈನ್ ಅವರ ತಲೆಯ ಬಳಿ ಕೆಲ ಕ್ಷಣ ಮೌನವಾಗಿ ನಿಂತಿತು. ಆಗಲೇ ದೇಹ ತುಂಬಾ ದುರ್ಬಲನಾಗಿದ್ದರೂ, ಯಜಮಾನನ ದೇಹದ ಬಳಿಯಿಂದ ದೂರ ಸರಿಯಲು ಅದು ಮನಸ್ಸು ಮಾಡಲಿಲ್ಲ. ಆ ಕ್ಷಣದಲ್ಲಿ ತನ್ನ ಪ್ರೀತಿಯ ಯಜಮಾನನಿಗೆ ಅದು ಮಾತಿಲ್ಲದ ವಿದಾಯ ಹೇಳುತ್ತಿತ್ತು.
ಸ್ವಲ್ಪ ಹೊತ್ತಿನ ಬಳಿಕ ಪ್ರದೀಪ್ ಜೈನ್ ಅವರ ಪಾರ್ಥಿವ ಶರೀರವನ್ನು ಹೊತ್ತು ಅಂತಿಮ ಯಾತ್ರೆ ಆರಂಭವಾಯಿತು. ದುಗ್ಗು ಯಾವುದೇ ಗದ್ದಲವಿಲ್ಲದೆ ಮೌನವಾಗಿ ಆ ಮೆರವಣಿಗೆಯ ಹಿಂದೆ ನಡೆಯತೊಡಗಿತು. ಆದರೆ ಕೆಲವೇ ಹೆಜ್ಜೆ ನಡೆದ ಅದು ಏಕಾಏಕಿ ಕುಸಿದು ಬಿತ್ತು. ದುಃಖದಲ್ಲಿ ಮುಳುಗಿದ್ದ ಕುಟುಂಬದವರು, ಸ್ನೇಹಿತರು ಹಾಗೂ ಅಕ್ಕಪಕ್ಕದವರ ಕಣ್ಮುಂದೆಯೇ ಆ ನಿಷ್ಠಾವಂತ ಜೀವವೂ ತನ್ನ ಯಜಮಾನನ ಅಂತಿಮ ಪಯಣದಲ್ಲಿಯೇ ಕೊನೆಯುಸಿರೆಳೆಯಿತು.

ಒಂದೇ ದಿನ, ಒಂದೇ ಮನೆಯಿಂದ, ಎರಡು ಜೀವಗಳು ಶಾಶ್ವತವಾಗಿ ದೂರವಾದವು. ಒಂದು ಸಾವಿನ ನೋವನ್ನು ತಡೆಯಲಾರದೆ ಇದ್ದ ಕುಟುಂಬ, ಕ್ಷಣಾರ್ಧದಲ್ಲೇ ಮತ್ತೊಂದು ಅಗಲಿಕೆಯನ್ನು ಎದುರಿಸಬೇಕಾಯಿತು.
ನಂತರ ದುಗ್ಗುವಿಗೂ ಪ್ರತ್ಯೇಕ ಚಿತಾರಥವನ್ನು ಸಿದ್ಧಪಡಿಸಲಾಯಿತು. ಬದುಕಿನುದ್ದಕ್ಕೂ ಜೊತೆಯಾಗಿ ಸಾಗಿದ ಇಬ್ಬರು, ತಮ್ಮ ಕೊನೆಯ ಪಯಣವನ್ನೂ ಒಟ್ಟಿಗೇ ಆರಂಭಿಸಿದರು. ಪ್ರದೀಪ್ ಜೈನ್ ಅವರ ಅಂತ್ಯಕ್ರಿಯೆಯನ್ನು ಸಂಪ್ರದಾಯದಂತೆ ನೆರವೇರಿಸಲಾಯಿತು. ದುಗ್ಗುವನ್ನು ಅವರ ಅಂತ್ಯಸಂಸ್ಕಾರ ನಡೆದ ಸ್ಥಳದ ಸಮೀಪವೇ ಗೌರವಪೂರ್ವಕವಾಗಿ ಸಮಾಧಿ ಮಾಡಲಾಯಿತು.
“ಚಿಕ್ಕ ಮಗುವಿಗೆ ವಿದಾಯ ಹೇಳುವಾಗ ಹೇಗೆ ಪ್ರೀತಿ ಮತ್ತು ಕಾಳಜಿಯಿಂದ ಬೀಳ್ಕೊಡುತ್ತೇವೆಯೋ, ಅದೇ ಮಮತೆಯಿಂದ ದುಗ್ಗುವನ್ನೂ ಮಣ್ಣಿನ ಮಡಿಲಿಗೆ ಒಪ್ಪಿಸಿದ್ದೇವೆ” ಎಂದು ಕುಟುಂಬದವರು ಕಣ್ಣೀರಿಡುತ್ತ ಹೇಳಿದರು. ಆ ದೃಶ್ಯವನ್ನು ಕಂಡವರು ಕಣ್ಣೀರು ಹಾಕದೇ ಇರಲಿಲ್ಲ. ಜೈನ್ ಕುಟುಂಬಕ್ಕೆ ದುಗ್ಗು ಕೇವಲ ಸಾಕು ನಾಯಿಯಾಗಿರಲಿಲ್ಲ; ಅದು ಮನೆಯ ಮತ್ತೊಬ್ಬ ಸದಸ್ಯನಾಗಿತ್ತು.
ಮೃತ ಪ್ರದೀಪ್ ಜೈನ್ ಅವರ ತಮ್ಮ ದಿಲೀಪ್ ಜೈನ್ ಭಾವುಕರಾಗಿ ಮಾತನಾಡುತ್ತಾ, “15 ವರ್ಷಗಳ ಹಿಂದೆ ದುಗ್ಗು ನಮ್ಮ ಮನೆಗೆ ಬಂದ. ಆ ದಿನದಿಂದಲೇ ಅದು ನಮ್ಮ ಕುಟುಂಬದ ಸದಸ್ಯನಾದ. ನನ್ನ ಅಣ್ಣ ಹಾಗೂ ಅತ್ತಿಗೆಯ ಜೊತೆ ಅದಕ್ಕಿದ್ದ ಬಾಂಧವ್ಯವನ್ನು ಮಾತಿನಲ್ಲಿ ಹೇಳಲಾಗದು” ಎಂದು ಹೇಳಿದರು.

“ಅಣ್ಣ ಅಂಗಡಿಯಿಂದ ಮನೆಗೆ ಬರುವವರೆಗೂ ಅದು ಬಾಗಿಲ ಬಳಿ ಕಾಯುತ್ತಿತ್ತು. ಅಣ್ಣ ಊಟ ಮಾಡಿದ ಬಳಿಕವೇ ಅದು ಊಟ ಮಾಡುತ್ತಿತ್ತು. ನಾವು ಅದನ್ನು ಎಂದಿಗೂ ಕಟ್ಟಿ ಹಾಕಿರಲಿಲ್ಲ. ಮನೆಯೊಳಗೆ ಅದು ಸ್ವತಂತ್ರವಾಗಿ ಓಡಾಡುತ್ತಿತ್ತು. ಏಕೆಂದರೆ ಅದು ನಮ್ಮ ಮನೆಯವನಾಗಿತ್ತು” ಎಂದು ಅವರು ನೆನಪಿಸಿಕೊಂಡರು.
ಕುಟುಂಬದವರ ಪ್ರಕಾರ, ದುಗ್ಗು ಅತ್ಯಂತ ಶಾಂತ ಸ್ವಭಾವದ ನಾಯಿಯಾಗಿತ್ತು. ಮನೆಗೆ ಬಂದವರನ್ನು ಪ್ರೀತಿಯಿಂದ ಸ್ವಾಗತಿಸುತ್ತಿತ್ತು. ಕೆಲವೊಮ್ಮೆ ಹಿರಿಯರ ಕಾಲಿನ ಬಳಿ ಬಾಗುವ ಮೂಲಕ ಆಶೀರ್ವಾದ ಪಡೆಯುವಂತೆ ವರ್ತಿಸುತ್ತಿತ್ತು. ಆದರೆ ಪ್ರದೀಪ್ ಜೈನ್ ಅವರೊಂದಿಗಿನ ಅದರ ಬಾಂಧವ್ಯ ಮಾತ್ರ ಎಲ್ಲಕ್ಕಿಂತ ಭಿನ್ನವಾಗಿತ್ತು.
“ನನ್ನ ಅಣ್ಣನ ಆರೋಗ್ಯ ಹದಗೆಟ್ಟಾಗಲೆಲ್ಲ ದುಗ್ಗುವಿನ ವರ್ತನೆಯೂ ಬದಲಾಗುತ್ತಿತ್ತು. ಕಳೆದ ಒಂದೂವರೆ ತಿಂಗಳಿನಿಂದ ಅಣ್ಣ ಅನಾರೋಗ್ಯದಿಂದ ಬಳಲುತ್ತಿದ್ದರು. ಆ ಅವಧಿಯಲ್ಲಿ ಅದು ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಅಣ್ಣನ ಆರೋಗ್ಯ ಸುಧಾರಿಸಿದರೆ ಅದು ಕೂಡ ಮತ್ತೆ ಚೇತರಿಸಿಕೊಳ್ಳುತ್ತಿತ್ತು” ಎಂದು ದಿಲೀಪ್ ವಿವರಿಸಿದರು.
ದುಗ್ಗು ವಯಸ್ಸಾಗಿತ್ತು, ದುರ್ಬಲವಾಗಿತ್ತು ಎಂಬುದು ಕುಟುಂಬಕ್ಕೆ ತಿಳಿದಿತ್ತು. ಆದರೆ ಯಜಮಾನನ ಕೊನೆಯ ಯಾತ್ರೆಯ ಕೆಲವೇ ಕ್ಷಣಗಳಲ್ಲಿ ಅದು ಕೂಡ ಪ್ರಾಣ ಬಿಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

“ಭೋಪಾಲ್‌ನಿಂದ ಅಣ್ಣನ ಪಾರ್ಥಿವ ಶರೀರ ಮನೆಗೆ ಬಂದಾಗ ದುಗ್ಗು ಅವರನ್ನು ನೋಡಬೇಕೆಂದು ನಿರಂತರವಾಗಿ ಬೊಗಳುತ್ತಲೇ ಇತ್ತು. ಮೊದಲಿಗೆ ನಾವು ಬಿಡಲಿಲ್ಲ. ನಂತರ ಕೊನೆಯ ಬಾರಿ ವಿದಾಯ ಹೇಳಲಿ ಎಂದು ಅವಕಾಶ ನೀಡಿದೆವು. ಅದು ಅಣ್ಣನ ತಲೆಯ ಬಳಿ ಹೋಗಿ ಸುತ್ತಾಡಿತು. ಸ್ವಲ್ಪ ಹೊತ್ತಿನ ಬಳಿಕ ಅದೂ ನಮ್ಮನ್ನು ಬಿಟ್ಟುಹೋಯಿತು” ಎಂದು ದಿಲೀಪ್ ಕಣ್ಣೀರಿಡುತ್ತ ಹೇಳಿದರು.
ಅಂತ್ಯಕ್ರಿಯೆ ಮುಗಿಸಿ ಮನೆಗೆ ಹಿಂದಿರುಗಿದ ಕ್ಷಣವನ್ನು ನೆನಪಿಸಿಕೊಂಡ ಅವರು, “ಅಣ್ಣನ ಅಂತ್ಯಸಂಸ್ಕಾರ ಮಾಡಿದೆವು. ದುಗ್ಗುವನ್ನು ನಮ್ಮ ಮನೆಯ ಮಗುವಿನಂತೆ ಮಮತೆಯಿಂದ ಸಮಾಧಿ ಮಾಡಿದೆವು. ಈಗ ಇಬ್ಬರೂ ಇಲ್ಲ. ಈ ಮನೆ ಸಂಪೂರ್ಣ ಖಾಲಿಯಾಗಿದೆ” ಎಂದರು.
ಅಕ್ಕಪಕ್ಕದವರ ಪ್ರಕಾರ, ದುಗ್ಗು ತನ್ನ ಇಡೀ ಬದುಕನ್ನು ಪ್ರದೀಪ್ ಜೈನ್ ಅವರೊಂದಿಗೇ ಕಳೆದಿತ್ತು. ಕೊನೆಯ ಕ್ಷಣದವರೆಗೂ ತನ್ನ ಯಜಮಾನನ ಮೇಲಿನ ಪ್ರೀತಿ ಮತ್ತು ನಿಷ್ಠೆಯನ್ನು ಅದು ಕಾಪಾಡಿಕೊಂಡಿತ್ತು. 15 ವರ್ಷಗಳ ಕಾಲ ಪ್ರತಿದಿನವೂ ಬಾಗಿಲ ಬಳಿ ನಿಂತು ಅವರಿಗಾಗಿ ಕಾಯುತ್ತಿದ್ದ ಅದು, ಕೊನೆಗೆ ಅವರ ಕೊನೆಯ ಪಯಣದಲ್ಲೂ ಜೊತೆಯಾಗಿ ನಡೆದು ತನ್ನ ಜೀವವನ್ನೇ ಅರ್ಪಿಸಿತು.
ಸಂಬಂಧಗಳು ಸಮಯದ ಓಟದಲ್ಲಿ ಸಡಿಲವಾಗುತ್ತಿರುವ ಈಗಿನ ಜಗತ್ತಿನಲ್ಲಿ, ಪ್ರದೀಪ್ ಜೈನ್ ಮತ್ತು ದುಗ್ಗುವಿನ ಈ ಕಥೆ ಪ್ರೀತಿ, ನಿಷ್ಠೆ ಮತ್ತು ಬಾಂಧವ್ಯಕ್ಕೆ ಮಾತುಗಳ ಅಗತ್ಯವಿಲ್ಲ ಎಂಬುದನ್ನು ಮೌನವಾಗಿ ಹೇಳಿದೆ. ಕೆಲವೊಮ್ಮೆ ಮಾತನಾಡಲಾರದ ಒಂದು ಜೀವ, ಮನುಷ್ಯರು ಹೇಳಲಾರದಷ್ಟು ಪ್ರೀತಿಯನ್ನು ತನ್ನ ಬದುಕಿನ ಮೂಲಕ ತೋರಿಸಿಬಿಡುತ್ತದೆ. ತನ್ನ ಯಜಮಾನನನ್ನು ಒಂಟಿಯಾಗಿ ಕಳುಹಿಸಲು ಮನಸ್ಸಾಗದೆ, ಕೊನೆಯ ಹೆಜ್ಜೆಯವರೆಗೂ ಜೊತೆಯಾಗಿ ನಡೆದು ಅದೇ ಪಯಣದಲ್ಲಿ ಕಣ್ಮುಚ್ಚಿದ ದುಗ್ಗು, ನಿಷ್ಠೆ ಎಂದರೆ ಏನು ಎಂಬುದಕ್ಕೆ ಜೀವಂತ ಉದಾಹರಣೆಯಾಗಿ ಉಳಿಯುತ್ತದೆ.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!