ಬೆಳಗಾವಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಈ ಬಗ್ಗೆ ಸಮಗ್ರ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಅಬಕಾರಿ ಇಲಾಖೆ ಬೆಳಗಾವಿ, ಕಲಬುರ್ಗಿ, ದಾವಣಗೆರೆ ವಿಭಾಗದ ಹೆಚ್ಚುವರಿ ಆಯುಕ್ತ ವೈ.ಡಿ.ಮಂಜುನಾಥ ಮನೆಯಿಂದ ರೂ. 5.5 ಕೋಟಿ ನಗದು ಸೇರಿ 13.35 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ನಗರ ಅಬಕಾರಿ ಜಿಲ್ಲೆ 8ರ ಉಪಯುಕ್ತ ಜಗದೀಶ ನಾಯಕ್ ಮದ್ಯ ಮಾರಾಟ ಸನ್ನದ್ದು ಕೋರಿ ಅರ್ಜಿದಾರರಿಂದ 25 ಲಕ್ಷ ರೂಪಾಯಿ ಲಂಚ ಪಡೆಯುವಾಗ ಇದೇ ವರ್ಷದ ಜನವರಿ 17ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಎಫ್ ಐ ಆರ್ ಆಧಾರದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿ ಕೊಂಡು ಇಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು ಎಂದು ಖಚಿತ ಮೂಲಗಳು ತಿಳಿಸಿವೆ.
ಬೆಂಗಳೂರು ವಲಯ ಕಚೇರಿಯ ಇಡಿ ಪಿಎಂ, ಪಿಎಂಎಲ್ಎ, 2002 ಅಡಿಯಲ್ಲಿ 26.6.2026 ರಂದು 14 ಕಡೆ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಇದರಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರಿನ 14 ಸ್ಥಳಗಳಲ್ಲಿ ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು. ಜಗದೀಶ್ ನಾಯಕ್, ಅಬಕಾರಿ ಇಲಾಖೆಯ ಮತ್ತೊಬ್ಬ ಅಧಿಕಾರಿ ಕೆ.ಎಂ. ತಮ್ಮಯ್ಯ ಮಂಜುನಾಥ್ ಅವರ ಮನೆ ಮತ್ತು ಮೂವರು ಅಧಿಕಾರಿಗಳ ಆಪ್ತರ ಮನೆಗಳಲ್ಲಿ ಶೋಧ ನಡೆಸಲಾಗಿತ್ತು ಎಂದು ಇಡಿ ಪ್ರಕಟಣೆ ತಿಳಿಸಿದೆ. ಸಂಬಂಧಿಕರು, ಆಪ್ತರ ಮನೆಯಲ್ಲಿ 5.5 ಕೋಟಿ ರೂಪಾಯಿ ನಗದು 7.8 ಕೋಟಿ ರೂಪಾಯಿ ಚಿನ್ನಾಭರಣ ಮತ್ತು 3.3 ಲಕ್ಷದ ವಿದೇಶಿ ಕರೆನ್ಸಿ ವಶಕ್ಕೆ ಪಡೆಯಲಾಗಿದೆ. ಬುಧವಾರ ಬೆಳಗ್ಗೆ ಆರಂಭವಾಗಿದ್ದ ಶೋಧ ಗುರುವಾರ ಮಧ್ಯಾಹ್ನದವರೆಗೂ ನಡೆದಿದೆ. ಇದುವರೆಗೆ ಚರಾಸ್ತಿಗಳ ವಿವರ ಲಭ್ಯವಾಗಿದೆ. ಶೋಧದ ಸಂದರ್ಭದಲ್ಲಿ ಜಮೀನು, ನಿವೇಶನ ವಾಣಿಜ್ಯ ಸಂಕೀರ್ಣಗಳ ದಾಖಲೆ ಪತ್ರ ಸಿಕ್ಕಿವೆ. ಅವುಗಳ ಮೌಲ್ಯ ಲೆಕ್ಕ ಹಾಕಲಾಗುತ್ತಿದೆ. ಬ್ಯಾಂಕ್ ಖಾತೆ ಠೇವಣಿ, ಶೇರು ಹೂಡಿಕೆ, ಬಾಂಡ್, ಬ್ಯಾಂಕ್ ಲಾಕರ್ ಗಳ ಪರಿಶೀಲನೆ ನಡೆಯುತ್ತಿದೆ.