ಲಕ್ನೋ: ಸಾವು ಗೆದ್ದು ಬರುವುದು ಎಂದರೆ ಇದೇ ಇರಬೇಕು! ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿ, ಮನೆಯವರು ಅಂತ್ಯಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ ವೇಳೆ ಶವವೊಂದು ಜೀವತಳೆದು ಎದ್ದು ಕುಳಿತ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಸಮಾಧಿ ಮಾಡಲು ಗುಂಡಿ ತೋಡಿ, ವಿಧಿವಿಧಾನಗಳು ನಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ ಎನ್ನಲಾದ ಯುವಕ ಕೈಕಾಲು ಆಡಿಸಲು ಶುರುಮಾಡಿದ್ದು ನೋಡಿ ನೆರೆದಿದ್ದವರು ದೆವ್ವ ಎಂದು ಓಡಿಹೋದರೆ, ಕುಟುಂಬಸ್ಥರು ಅಕ್ಷರಶಃ ದಿಗ್ಭ್ರಮೆಗೊಂಡಿದ್ದಾರೆ.
ಈ ಅಚ್ಚರಿಯ ಘಟನೆಗೆ ಸಾಕ್ಷಿಯಾದವನು 20 ವರ್ಷದ ಮೊಹಮ್ಮದ್ ಫುರ್ಕಾನ್. ಜೂನ್ 21 ರಂದು ಭೀಕರ ಅಪಘಾತಕ್ಕೀಡಾಗಿದ್ದ ಫುರ್ಕಾನ್ನನ್ನು ಲಕ್ನೋದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳ ಕಾಲ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನ ಚಿಕಿತ್ಸೆಗಾಗಿ ಕುಟುಂಬಸ್ಥರು ಸುಮಾರು 7 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಆದರೆ, ಮತ್ತಷ್ಟು ಹಣ ಪಾವತಿಸಲು ಅಸಾಧ್ಯ ಎಂದು ಕುಟುಂಬದವರು ಹೇಳಿದ ಬೆನ್ನಲ್ಲೇ, ಖಾಸಗಿ ಆಸ್ಪತ್ರೆಯ ವೈದ್ಯರು ಫುರ್ಕಾನ್ ಮೃತಪಟ್ಟಿದ್ದಾನೆ ಎಂದು ಘೋಷಿಸಿ ಮನೆಗೆ ಕಳುಹಿಸಿದ್ದರು.
ಮನೆಗೆ ಬಂದ 'ಶವ'ಕ್ಕೆ ಮುಸ್ಲಿಂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲು ಸಿದ್ಧತೆ ನಡೆಯಿತು. ಸ್ಮಶಾನದಲ್ಲಿ ಗುಂಡಿ ತೋಡಲಾಗಿತ್ತು, ಅಂತಿಮ ವಿಧಿವಿಧಾನಗಳು ನಡೆಯುತ್ತಿದ್ದವು. ಇನ್ನೇನು ಮಣ್ಣು ಮಾಡಬೇಕು ಎನ್ನುವಷ್ಟರಲ್ಲಿ ಫುರ್ಕಾನ್ ದೇಹದಲ್ಲಿ ಚಲನೆ ಕಂಡುಬಂದಿದೆ. ಇದನ್ನು ಗಮನಿಸಿದ ಕೂಡಲೇ ಆತನನ್ನು ತಕ್ಷಣವೇ ನಗರದ ಡಾ. ರಾಮ್ ಮನೋಹರ್ ಲೋಹಿಯಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆತನನ್ನು ಪರೀಕ್ಷಿಸಿದ ವೈದ್ಯರು, ಆತನಲ್ಲಿ ನಾಡಿಮಿಡಿತ, ರಕ್ತದೊತ್ತಡ ಮತ್ತು ಪ್ರತಿಕ್ರಿಯೆಗಳು ಇರುವುದನ್ನು ಕಂಡು ಬೆರಗಾಗಿದ್ದಾರೆ. ಕೂಡಲೇ ಆತನನ್ನು ವೆಂಟಿಲೇಟರ್ಗೆ ಸ್ಥಳಾಂತರಿಸಿ ಚಿಕಿತ್ಸೆ ಆರಂಭಿಸಿದ್ದಾರೆ.
ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು 'ಅವಧಿಪೂರ್ವ ಸಾವು ಘೋಷಣೆ' ಎನ್ನಲಾಗುತ್ತದೆ. ಖಾಸಗಿ ಆಸ್ಪತ್ರೆಯ ವೈದ್ಯರು ಕೇವಲ ಹಣಕ್ಕಾಗಿ ಅಥವಾ ಬೇಜವಾಬ್ದಾರಿಯಿಂದ ಈ ರೀತಿ ಮಾಡಿದ್ದಾರೆಯೇ ಎಂಬ ಬಗ್ಗೆ ಈಗ ತನಿಖೆ ಆರಂಭವಾಗಿದೆ. ಲಕ್ನೋದ ಮುಖ್ಯ ವೈದ್ಯಕೀಯ ಅಧಿಕಾರಿ ಈ ಬಗ್ಗೆ ಅಧಿಕೃತ ವಿಚಾರಣೆಗೆ ಆದೇಶಿಸಿದ್ದಾರೆ. ಮಗನ ಸಾವಿನ ಶೋಕದಲ್ಲಿದ್ದ ಕುಟುಂಬಕ್ಕೆ ಈ ಪವಾಡವು ಆಘಾತದ ನಡುವೆಯೂ ಹೊಸ ಭರವಸೆ ನೀಡಿದೆ. ಸದ್ಯ ಫುರ್ಕಾನ್ ಸ್ಥಿತಿ ಗಂಭೀರವಾಗಿದ್ದರೂ, ಆತ ಬದುಕುಳಿಯುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
