ನವದೆಹಲಿ: ಇಂದು ದೇಶದ ಕೋಟ್ಯಂತರ ಮೊಬೈಲ್ ಬಳಕೆದಾರರಿಗೆ ಒಮ್ಮೆಲೇ‘ಎಮರ್ಜೆನ್ಸಿ ಅಲರ್ಟ್’ ಸಂದೇಶಗಳು ಬಂದಿವೆ. ಸೈಲೆಂಟ್ ಮೋಡ್ನಲ್ಲಿದ್ದ ಫೋನ್ಗಳೂ ಸಹ ಜೋರಾಗಿ ಶಬ್ದ ಮಾಡುತ್ತಾ ಕಂಪಿಸಲು (Vibrate) ಶುರುಮಾಡಿವೆ. ಮೊಬೈಲ್ ಫೋನ್ ಹಠಾತ್ತಾಗಿ ಜೋರಾಗಿ ಶಬ್ದ ಮಾಡುತ್ತ ಕಂಪಿಸಿದ್ದರೆ ಅಥವಾ ವಿಚಿತ್ರವಾದ ಸೌಂಡ್ ಮಾಡಿದ್ದರೆ ಗಾಬರಿಯಾಗುವ ಅಗತ್ಯವಿಲ್ಲ. ಯಾಕೆಂದರೆ ಇದು ದೇಶದ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸಲು ಭಾರತ ಸರ್ಕಾರವು ನಡೆಸಿದ ತಾಂತ್ರಿಕ ಪರೀಕ್ಷೆಯಾಗಿದೆ.
ಶನಿವಾರ ದೇಶದಾದ್ಯಂತ ಲಕ್ಷಾಂತರ ಮೊಬೈಲ್ ಬಳಕೆದಾರರಿಗೆ “ಅತ್ಯಂತ ತೀವ್ರವಾದ ಎಚ್ಚರಿಕೆ” (Extremely Severe Alert) ಎಂಬ ಸಂದೇಶವನ್ನು ರವಾನಿಸುವ ಮೂಲಕ, ಸರ್ಕಾರವು ತನ್ನ ಸ್ವದೇಶಿ ನಿರ್ಮಿತ ‘ಸೆಲ್ ಬ್ರಾಡ್ಕಾಸ್ಟ್’ (Cell Broadcast) ತುರ್ತು ಎಚ್ಚರಿಕೆ ವ್ಯವಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಿದೆ.
ಈ ಅತ್ಯಾಧುನಿಕ ವ್ಯವಸ್ಥೆಯನ್ನು ಮೇ 2, 2026 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಜಂಟಿಯಾಗಿ ಲೋಕಾರ್ಪಣೆಗೊಳಿಸಿದರು. ಈ ಇಡೀ ವ್ಯವಸ್ಥೆಯ ಹಿಂದಿರುವುದು ‘ಸಚೇತ್’ (SACHET) ಎಂಬ ಸಮಗ್ರ ಎಚ್ಚರಿಕೆ ಪ್ಲಾಟ್ಫಾರ್ಮ್.
ದೂರಸಂಪರ್ಕ ಇಲಾಖೆಯ ಪ್ರಮುಖ ಸಂಶೋಧನಾ ಸಂಸ್ಥೆಯಾದ ಸಿ-ಡಾಟ್ (C-DOT) ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದು ಅಂತರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಶಿಫಾರಸಿನಂತೆ ‘ಕಾಮನ್ ಅಲರ್ಟಿಂಗ್ ಪ್ರೋಟೋಕಾಲ್’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಭಾರತದ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇವೆ ಲಭ್ಯವಿದೆ.
ಈ ವ್ಯವಸ್ಥೆ ಏಕೆ ಮುಖ್ಯ?
ಸಾಮಾನ್ಯ ಎಸ್ಎಂಎಸ್ (SMS) ಸಂದೇಶಗಳಿಗಿಂತ ಈ ‘ಸೆಲ್ ಬ್ರಾಡ್ಕಾಸ್ಟ್’ ತಂತ್ರಜ್ಞಾನ ಹೆಚ್ಚು ಶಕ್ತಿಶಾಲಿ ಮತ್ತು ಪರಿಣಾಮಕಾರಿಯಾಗಿದೆ. ನಿಮ್ಮ ಫೋನ್ ಸೈಲೆಂಟ್ ಮೋಡ್ ಅಥವಾ ‘ಡೋಂಟ್ ಡಿಸ್ಟರ್ಬ್’ ಮೋಡ್ನಲ್ಲಿದ್ದರೂ ಸಹ, ಈ ಎಚ್ಚರಿಕೆ ಸಂದೇಶವು ದೊಡ್ಡದಾದ ಶಬ್ದದೊಂದಿಗೆ ಪರದೆಯ ಮೇಲೆ ಮೂಡುತ್ತದೆ. ಭೂಕಂಪ, ಸುನಾಮಿ, ಮಿಂಚಿನ ಹೊಡೆತದಂತಹ ನೈಸರ್ಗಿಕ ವಿಕೋಪಗಳು ಹಾಗೂ ಅನಿಲ ಸೋರಿಕೆಯಂತಹ ವಿಪತ್ತುಗಳ ಸಮಯದಲ್ಲಿ ಜನರನ್ನು ತಕ್ಷಣವೇ ಎಚ್ಚರಿಸಲು ಇದು ಸಹಕಾರಿಯಾಗಿದೆ. ಇದು ಅಡೆತಡೆಯಿಲ್ಲದ ಸೇವೆ ನೀಡುತ್ತದೆ. ಮೊಬೈಲ್ ನೆಟ್ವರ್ಕ್ ಜಾಮ್ ಆಗಿದ್ದರೂ ಸಹ ಈ ಸಂದೇಶಗಳು ನಿಖರವಾಗಿ ತಲುಪುತ್ತವೆ.
134 ಶತಕೋಟಿ ಸಂದೇಶಗಳ ದಾಖಲೆ
ಈ ವ್ಯವಸ್ಥೆಯು ಈಗಾಗಲೇ ಪರೀಕ್ಷಾರ್ಥ ಹಂತದಲ್ಲಿ ದೊಡ್ಡ ಯಶಸ್ಸು ಕಂಡಿದೆ. ಚಂಡಮಾರುತ ಮತ್ತು ಹವಾಮಾನ ವೈಪರೀತ್ಯದ ಸಂದರ್ಭದಲ್ಲಿ . ವಿಪತ್ತು ನಿರ್ವಹಣಾ ಪ್ರಾಧಿಕಾರಗಳು ಈವರೆಗೆ 19ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಸುಮಾರು 134 ಶತಕೋಟಿ ಎಚ್ಚರಿಕೆ ಸಂದೇಶಗಳನ್ನು ರವಾನಿಸಿವೆ.
ಈಗ ಅಧಿಕೃತವಾಗಿ ಚಾಲನೆಗೊಂಡಿರುವ ಈ ವ್ಯವಸ್ಥೆಯು, ಯಾವುದೇ ವ್ಯಕ್ತಿ ತನ್ನ ಫೋನ್ನಲ್ಲಿ ಎಂತಹ ಸೆಟ್ಟಿಂಗ್ ಇಟ್ಟುಕೊಂಡಿದ್ದರೂ ತುರ್ತು ಪರಿಸ್ಥಿತಿಯಲ್ಲಿ ಆತನಿಗೆ ಮಾಹಿತಿ ತಲುಪುವಂತೆ ಮಾಡುತ್ತದೆ. ಇದು ಭವಿಷ್ಯದಲ್ಲಿ ವಿಪತ್ತುಗಳ ಸಂದರ್ಭದಲ್ಲಿ ಪ್ರಾಣಹಾನಿಯನ್ನು ತಡೆಗಟ್ಟಲು ಭಾರತಕ್ಕೆ ದೊರೆತ ದೊಡ್ಡ ತಾಂತ್ರಿಕ ಶಕ್ತಿಯಾಗಿದೆ.
