ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ದಶಕಗಳಿಂದ ಬೇರೂರಿದ್ದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಪಕ್ಷಗಳ 62 ವರ್ಷಗಳ ಅಧಿಪತ್ಯಕ್ಕೆ ತೆರೆಬಿದ್ದಿದೆ. ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ನಾಯಕ, ನಟ ‘ದಳಪತಿ’ ವಿಜಯ ಬುಧವಾರ ನಡೆದ ಹೈಡ್ರಾಮಾದಿಂದ ಕೂಡಿದ್ದ ವಿಶ್ವಾಸ ಮತಯಾಚನೆಯಲ್ಲಿ ಜಯಗಳಿಸುವ ಮೂಲಕ ತಮಿಳುನಾಡಿನ ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಗೆದ್ದಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ವಿಜಯ ಪರವಾಗಿ 144 ಶಾಸಕರು ಮತ ಚಲಾಯಿಸಿದರೆ, ವಿರುದ್ಧವಾಗಿ 22 ಮತಗಳು ಬಿದ್ದವು. ಐವರು ಶಾಸಕರು ತಟಸ್ಥರಾಗಿ ಉಳಿದರು.
ಮೇ 4 ರಂದು ಪ್ರಕಟವಾದ ಫಲಿತಾಂಶದಲ್ಲಿ 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದಿದ್ದ ಟಿವಿಕೆ, ಬಹುಮತಕ್ಕೆ (118) ಹತ್ತು ಸ್ಥಾನಗಳ ಕೊರತೆ ಎದುರಿಸುತ್ತಿತ್ತು. ಆದರೆ ಕಾಂಗ್ರೆಸ್ (5), ಎಡಪಕ್ಷಗಳು 4, ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳ ತಲಾ 2 ಶಾಸಕರು ಸೇರಿ ಒಟ್ಟು 13 ಶಾಸಕರು ವಿಜಯ ಅವರಿಗೆ ಬೆಂಬಲಿಸಿದ್ದರು. ಅಲ್ಲದೆ, ಟಿಟಿವಿ ದಿನಕರನ್ ನೇತೃತ್ವದ ಎಎಂಎಂಕೆಯ ಏಕೈಕ ಶಾಸಕ ಕೂಡ ವಿಜಯ ಪರ ಮತ ಹಾಕಿದರು.
ಟಿವಿಕೆಯ 108 ಶಾಸಕರಲ್ಲಿ ಒಬ್ಬರು ಸ್ಪೀಕರ್ ಆಗಿ ಆಯ್ಕೆಯಾದ ಕಾರಣ ಮತದಾನದಿಂದ ಹೊರಗುಳಿದರು. ವಿಜಯ ತಾವು ಸ್ಪರ್ಧಿಸಿದ್ದ ಎರಡು ಕ್ಷೇತ್ರಗಳ ಪೈಕಿ ಒಂದಕ್ಕೆ ರಾಜೀನಾಮೆ ನೀಡಿದ ಕಾರಣ ಮತ್ತೊಂದು ಸ್ಥಾನ ಕಡಿಮೆಯಾಯಿತು. ಮತ್ತು ತಿರುಪ್ಪತ್ತೂರು ಕ್ಷೇತ್ರದ ಶಾಸಕ ಶ್ರೀನಿವಾಸ ಸೇತುಪತಿಯವರ ಜಯ ಪ್ರಶ್ನಿಸಿ ನ್ಯಾಯಾಲಯದಲ್ಲಿ ರಾಜಿ ಸಲ್ಲಿಸಲಾಗಿದೆ. ಹೀಗಾಗಿ ಅಂತಿಮವಾಗಿ 105 ಟಿವಿಕೆ ಶಾಸಕರು ವಿಜಯ ಪರ ಮತ ಚಲಾಯಿಸಿದರು. ಕಾಂಗ್ರೆಸ್ (5), ಎಡಪಕ್ಷಗಳು 4, ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳ ತಲಾ 2 ಶಾಸಕರು ಸೇರಿ ಒಟ್ಟು 13 ಶಾಸಕರು ವಿಜಯ ಪರ ಮತ ಹಾಕಿದರು. ಆಗ ವಿಜಯ ಅವರಿಗೆ 119 ಮತಗಳ ಅಲ್ಪ ಬಹುಮತ ಸಿಗಬೇಕಿತ್ತು. ಆದರೆ ವಿಶ್ವಾಸ ಮತ ಯಾಚನೆ ವೇಳೆ ಬರೋಬ್ಬರಿ 144 ಶಾಸಕರು ವಿಜಯ ಅವರನ್ನು ಬೆಂಬಲಿಸಿ ಮತ ಚಲಾಯಿಸಿದರು.
ಎಐಎಡಿಎಂಕೆ ಇತಿಹಾಸದಲ್ಲೇ ದೊಡ್ಡ ಬಿರುಕು
ಈ ವಿಶ್ವಾಸ ಮತಯಾಚನೆಯು ಎಐಎಡಿಎಂಕೆ ಪಕ್ಷದಲ್ಲಿನ ಆಂತರಿಕ ಕಚ್ಚಾಟವನ್ನು ಜಗಜ್ಜಾಹೀರುಗೊಳಿಸಿದೆ. ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರು ವಿಜಯ ವಿರುದ್ಧ ಮತ ಚಲಾಯಿಸಲು ಸೂಚಿಸಿದ್ದರೂ, ಪಕ್ಷದ ಸೂಚನೆಯನ್ನು ಧಿಕ್ಕರಿಸಿ 25 ಶಾಸಕರು ವಿಜಯ ಪರ ಮತ ಹಾಕಿದ್ದಾರೆ. ಈ ಮೊದಲು ಘೋಷಿಸಿದಂತೆ ಸಿ.ವಿ. ಷಣ್ಮುಖಂ ನೇತೃತ್ವದ ಎಐಎಡಿಂಕೆ ಪಕ್ಷದ ಬಂಡಾಯ ಬಣವು ವಿಜಯ ಸರ್ಕಾರದ ಪರವಾಗಿ ಮತ ಚಲಾಯಿಸಿವೆ.
ಡಿಎಂಕೆ ಮತ್ತು ಎಐಎಡಿಎಂಕೆ ಒಂದಾಗಿ ವಿಜಯ ಅವರನ್ನು ಸೋಲಿಸಲು ಸಂಚು ರೂಪಿಸಿವೆ ಎಂಬ ವದಂತಿಗಳ ನಡುವೆ, ಷಣ್ಮುಖಂ ಬಣ ವಿಜಯ್ ಬೆಂಬಲಕ್ಕೆ ನಿಂತಿತು. ಸತತ ನಾಲ್ಕು ಚುನಾವಣೆಗಳಲ್ಲಿ ಸೋಲು ಕಂಡಿರುವ ಎಐಎಡಿಎಂಕೆ, ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದೆ.
ಈ ಬಂಡಾಯ ಶಾಸಕರನ್ನು ಎಐಎಡಿಎಂಕೆ ತೀವ್ರವಾಗಿ ಟೀಕಿಸಿದ್ದು, “ಅಧಿಕಾರಕ್ಕಾಗಿ ಟಿವಿಕೆ ಮುಂದೆ ಇವರು ಭಿಕ್ಷೆ ಬೇಡುತ್ತಿದ್ದಾರೆ” ಎಂದು ಕಿಡಿಕಾರಿದೆ.
2016ರಲ್ಲಿ ಜಯಲಲಿತಾ ಅವರ ನಿಧನದ ನಂತರ ಎಐಎಡಿಎಂಕೆ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಾ ಬಂದಿದೆ. ಪಳನಿಸ್ವಾಮಿ ಅವರು ಪಕ್ಷದ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ನಡುವೆ 2019, 2021 ಮತ್ತು 2024ರ ಸೋಲುಗಳ ನಂತರ ಕಳೆದ ತಿಂಗಳ ವಿಧಾನಸಭೆ ಚುನಾವಣೆಯಲ್ಲೂ ಅನುಭವಿಸಿದ ಸೋಲು ಪಕ್ಷವನ್ನು ಹೈರಾಣಾಗಿಸಿದೆ.
ಇನ್ನೊಂದೆಡೆ, ಡಿಎಂಕೆಯ 59 ಶಾಸಕರು ಮತದಾನ ಬಹಿಷ್ಕರಿಸಿ ಹೊರನಡೆದರೆ, ಬಿಜೆಪಿಯ ಏಕೈಕ ಶಾಸಕ ಮತ್ತು ಪಿಎಂಕೆಯ 4 ಶಾಸಕರು ತಟಸ್ಥರಾಗಿ ಉಳಿಯುವ ಮೂಲಕ ರಾಜ್ಯದ ರಾಜಕೀಯ ಧ್ರುವೀಕರಣಕ್ಕೆ ಸಾಕ್ಷಿಯಾದರು.
