ವಿಜಯಪುರ: ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಎರಡನೇ ಹಂತದ ಸಚಿವ ಸಂಪುಟ ರಚನೆ ವೇಳೆ ಗಾಣಿಗ ಸಮಾಜದ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿಯಾದ ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಅವಕಾಶ ನೀಡಬೇಕು ಎಂದು ಗಾಣಿಗ ಸಮಾಜ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಲಕ್ಷ್ಮಣ ಸವದಿ, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ ಹಾಗೂ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಸೇರಿ ಮೂವರು ಶಾಸಕರಿದ್ದು, ಇವರಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಗಾಣಿಗ ಸಮಾಜವು 40 ಲಕ್ಷ ಜನಸಂಖ್ಯೆ ಹೊಂದಿದೆ. ಕಾಂಗ್ರೆಸ್ ಸರ್ಕಾರಕ್ಕೆ ಬಂದಾಗ ಪ್ರತಿ ಸಲ ಸಹ ಸಮಾಜಕ್ಕೆ ಸಚಿವ ಸ್ಥಾನದ ಬೇಡಿಕೆ ಇಡಬೇಕಾದ ಪರಿಸ್ಥಿತಿ ಇದೆ. ಆದರೂ, ಕಾಂಗ್ರೆಸ್ ಸರ್ಕಾರವು ಇದುವರೆಗೂ ಈ ಬೇಡಿಕೆ ಈಡೇರಿಲ್ಲ. ಈ ಬಾರಿಯಾದರೂ ಸಮುದಾಯದ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು ಎಂದರು.
ಲಕ್ಷ್ಮಣ ಸವದಿ ಸಂಘಟನಾ ಚತುರರಾಗಿದ್ದು, ಬಿಜೆಪಿಯಲ್ಲಿದ್ದಾಗ ಅವರು ಚುನಾವಣೆಯಲ್ಲಿ ಸೋತ ಸಂದರ್ಭದಲ್ಲೂ ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ನಂತರ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಆಗ ಪಕ್ಷದ ವರಿಷ್ಠರು ಅವರಿಗೆ ಒಳ್ಳೆಯ ಸ್ಥಾನ-ಮಾನದ ಭರವಸೆ ನೀಡಿದನ್ನು ಮರೆಯಬಾರದು ಎಂದು ನೆನಪಿಸಿದರು.
ಅಲ್ಲದೇ, ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಸುಮಾರು 20 ಮತಕ್ಷೇತ್ರದಲ್ಲಿ ಪಕ್ಷಕ್ಕೆ ಅನುಕೂಲವಾಗಿದೆ. ಇಂಡಿ, ಜೇವರ್ಗಿ, ಕೊಪ್ಪಳ ಸೇರಿ ಹಲವು ಕ್ಷೇತ್ರಗಳ ಶಾಸಕರು ಸ್ವತಃ ತಮ್ಮ ಗೆಲುವಿನಲ್ಲಿ ಲಕ್ಷ್ಮಣ ಸವದಿ ಸಹಕಾರವೂ ಪಾತ್ರ ವಹಿಸಿದ್ದು, ಅವರಿಂದಾಗಿಯೇ ಗಾಣಿಗ ಸಮಾಜದ ಮತಗಳು ತಮಗೆ ಬಂದಿದೆ ಎಂದು ಇಂದಿಗೂ ಹೇಳಿಕೊಳ್ಳುತ್ತಾರೆ ಎಂದು ಹೇಳಿದರು.
ಆದ್ದರಿಂದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಅವರಿಗೆ ಮನವಿ ಮಾಡುತ್ತಿದ್ದೇವೆ. ಒಂದು ವೇಳೆ, ಸಚಿವ ಸ್ಥಾನ ಸಿಗದ್ದರೆ, ರಾಜ್ಯಾದ್ಯಂತ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ. ನಿರ್ಲಕ್ಷ್ಯ ವಹಿಸಿದರೆ, ಮುಂದೆ ಒಂದು ನಿರ್ಣಯಕ್ಕೆ ಬರಬೇಕಾಗುತ್ತದೆ. ಗಾಣಿಗ ಸಮಾಜಕ್ಕೆ ಯಾವುದೇ ಪಕ್ಷ ಅನಿವಾರ್ಯವಲ್ಲ. ಪಕ್ಷದ ಪದಾಧಿಕಾರಿಗಳು ಸಹ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಲೋಣಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ, ಪದಾಧಿಕಾರಿಗಳಾದ ಅಶೋಕ ತರಡಿ, ಸಿ.ಎಸ್.ಬಿರಾದಾರ, ಶರಣಪ್ಪ ಶ್ಯಾಪೇಟಿ, ಎ.ಎಸ್.ಹೊಸಮನಿ, ಬಾಬು ಸಜ್ಜನ, ಐ.ಎಸ್.ಶಿರಾಡೋಣ, ಬಿ.ಕೆ.ಚೌಧರಿ ಇದ್ದರು.