ಕಠ್ಮಂಡು: ನೇಪಾಳ ಪ್ರವಾಹದ ವೇಳೆ ತ್ರಿಶೂಲಿ 3ಎ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿಕೊಂಡಿದ್ದ ವಿದ್ಯುತ್ ಪ್ರಾಧಿಕಾರದ ಇಬ್ಬರು ಸಿಬ್ಬಂದಿಯನ್ನು, ಘಟನೆ ನಡೆದ 9 ದಿನಗಳ ಬಳಿಕ ರಕ್ಷಿಸಲಾಗಿದೆ.
ಸುರಂಗದಲ್ಲಿ ಸಿಲುಕಿಕೊಂಡಿದ್ದ 30 ವರ್ಷದ ಸಂಜಯ್ ಶಾ ಅವರು ಕಾರ್ಯಾಚರಣೆಯ ನಂತರ ರಕ್ಷಣಾ ಸಿಬ್ಬಂದಿಯೊಂದಿಗೆ ಮಾತನಾಡಿದ್ದು, "ನಾನು ಘಟನೆ ನಡೆದ ಬಳಿಕ ಯಾರಾದರೂ ಬಂದು ನನ್ನನ್ನು ರಕ್ಷಿಸುತ್ತಾರೆ ಎನ್ನುವ ನಂಬಿಕೆಯಲ್ಲಿ 'ಹರೇ ಕೃಷ್ಣ' ಎಂದು ಸತತವಾಗಿ 9 ದಿನ ಪಠಿಸುತ್ತಿದ್ದೆ” ಎಂದು ಹೇಳಿದ್ದಾರೆ.
ಕಾಕತಾಳೀಯವಾಗಿ, ಸಂಜಯ್ ಶಾ ಅವರು ಕೃಷ್ಣ ಜನ್ಮಾಷ್ಟಮಿ ದಿನವೇ ಸುರಂಗದಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ.
'ಘಟನೆ ನಡೆಯುವ ವೇಳೆ ನಾನು ಕಂಟ್ರೋಲ್ ರೂಮ್ನಲ್ಲಿ ಕೆಲಸ ಮಾಡುತ್ತಿದೆ. ಎಲ್ಲರ ಜೀವವನ್ನು ಉಳಿಸುವುದು ನನ್ನ ಹೊಣೆಯಾಗಿತ್ತು, ಹಾಗಾಗಿ ನಾನು ಹಿಂದೆಯೇ ಉಳಿದುಕೊಳ್ಳಬೇಕಾಯಿತು. ಎಲ್ಲರಿಗೂ ಅಲ್ಲಿಂದ ಹೊರಹೋಗಲು ತಿಳಿಸುತ್ತಿದ್ದೆ, ಆದರೆ ನಾನು ಅಲ್ಲಿಂದ ತಪ್ಪಿಸಿಕೊಳ್ಳುವ ವೇಳೆಗೆ ತಡವಾಗಿತ್ತು' ಎಂದು ಹೇಳಿದ್ದಾರೆ.
'ಸಂಜಯ್ ಶಾ ಅವರನ್ನು ತ್ರಿಶೂಲಿಯಲ್ಲಿರುವ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಹಾಗೂ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ' ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.
ಇದೇ ವೇಳೆ 45 ವರ್ಷದ ಕಬೀರ್ ಮಹರ್ಜನ್ ಅವರನ್ನು ಕೂಡ ಸುರಕ್ಷಿತವಾಗಿ ರಕ್ಷಿಸಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲ್ಮಂಡುವಿನಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಇನ್ನೂ ಹಲವರು ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವ ಉದ್ದೇಶದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.