ಖಾನಾಪುರ : ಖಾನಾಪುರ ತಾಲೂಕಿನ ಬೈಲೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಸಕ ವಿಠ್ಠಲ ಹಲಗೇಕರ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ.
ಖಾನಾಪುರ ತಾಲೂಕಿನ ಬೈಲೂರು ಗ್ರಾಮದಲ್ಲಿ ನೂತನ ಹೆಸ್ಕಾಂ 33/11 ಕೆವಿ ಉಪಕೇಂದ್ರ ನಿರ್ಮಾಣದ ಬೇಡಿಕೆ ಇದೆ.
ಉಪಕೇಂದ್ರ ನಿರ್ಮಾಣಕ್ಕೆ ಉದ್ದೇಶಿಸಲಾದ ಜಾಗವನ್ನು ಪಂಚಾಯಿತಿಯಿಂದ ಲೀಸ್ (ಗುತ್ತಿಗೆ) ಆಧಾರದ ಮೇಲೆ ಪಡೆಯಬೇಕಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಜಾಗದ ಹಸ್ತಾಂತರ ಪ್ರಕ್ರಿಯೆಯು ನನೆಗುದಿಗೆ ಬಿದ್ದಿತ್ತು. ಇದಕ್ಕೆ ಶಾಸಕರಿಂದ ಸ್ಥಳದಲ್ಲೇ ಪರಿಹಾರ ದೊರೆತಿದೆ.
ರೈತರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಯೋಜನೆ ಎಷ್ಟು ಮುಖ್ಯ ಎಂಬುದನ್ನು ಅರಿತ ಶಾಸಕ ವಿಠ್ಠಲ ಸೋಮಣ್ಣ ಹಲಗೇಕರ ಅವರು ಸ್ವತಃ ಬೆಳಗಾವಿ ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಶಾಸಕರು, ಜಾಗದ ಹಸ್ತಾಂತರ ಪ್ರಕ್ರಿಯೆಯಲ್ಲಿ ಎದುರಾಗಿರುವ ತಾಂತ್ರಿಕ ಅಡಚಣೆಯನ್ನು ನಿವಾರಿಸಿ, ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಮತ್ತು ಕಾಮಗಾರಿಗೆ ವೇಗ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ರೈತರ, ಸಾರ್ವಜನಿಕರ ಹಿತರಕ್ಷಣೆಗೆ ಶಾಸಕರು ಬದ್ದತೆ ತೋರಿಸಿದರು.
